ಗೌರಿ ಹಬ್ಬದ ವಿಶೇಷ ಮಾಹಿತಿ. ಅಖಿಲೇಶ್ ಆಗಮವಾದಿ.

 




ಗೌರಿ ಹಬ್ಬದ ದಿನಾಂಕ 30 / 08 / 2022  ಮಂಗಳವಾರ  ಭಾದ್ರಪದ ಮಾಸದ  ಶುಕ್ಲ ಪಕ್ಷದ ತದಿಗೆ ತಿಥಿ 

ಬೆಳಿಗ್ಗೆ ಗೌರಿ ಪೂಜೆಗೆ ಮಹೂರ್ತ  5 : 22 ಕ್ಕೆ ಪ್ರಾರಂಭವಾಗಿ 07 : 52 ಕ್ಕೆ ಮುಕ್ತಾಯವಾಗುವುದು 

ಪೂಜೆಯ ಕಾಲಾವದಿ 2 ಗಂಟೆ 29 ನಿಮಿಷಗಳು . 

ಸ್ವರ್ಣಗೌರೀ ವ್ರತ   

                    ಶ್ರೀ ಸ್ವರ್ಣ ಗೌರಿ ವ್ರತ  ಹೆಸರೇ ಸೂಚಿಸುವಂತೆ  ಸ್ವರ್ಣ ಅಂದರೆ ಬಂಗಾರ ; ಅಂದರೆ ಬಂಗಾರ ಬಣ್ಣದಂತೆ ಹೊಳೆಯುವ  ಗೌರಿ  ಎಂದು ಅರ್ಥ.  ಅಂತಹ  ಜಗನ್ಮಾತೆಯಾದ ಗೌರಿಯನ್ನು ಭಾದ್ರಪದ ಮಾಸ ಕೃಷ್ಣ ಪಕ್ಷ  ತೃತೀಯ ತಿಥಿಯಂದು  ಷೋಡಶೋಪಚಾರದಿಂದ ಪೂಜಿಸಬೇಕು .ಈ ಹಬ್ಬವನ್ನು ಹೆಣ್ಣುಮಕ್ಕಳು ಮುತ್ತೈದೆಯರು  ಪ್ರಾಚೀನ ಕಾಲದಿಂದಲೂ  ಆಚರಿಸುತ್ತಾ  ಬಂದಿದ್ದಾರೆ .


                           ಈ ಹಬ್ಬದ ಆಚರಣೆಯ ರೀತಿ ಹೀಗಿದೆ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು  ಪಾಡ್ಯ   ತಿಥಿಯಂದು  ಅಭ್ಯಂಜನ ಮಾಡಿ , ಮೊರದ ಬಾಗಿನಕ್ಕೆ ಅಣಿಯಾದ  ಮೊರವನ್ನು ಶುಭ್ರಗೊಳಿಸಿ  ಅದಕ್ಕೆ ಅರಿಶಿನ,ಕುಂಕುಮ ಹಚ್ಚಿ ಚೆನ್ನಾಗಿ ಆರಿಸಿ ನಂತರ ಧಾನ್ಯಗಳು ,ತೆಂಗಿನಕಾಯಿ,ಬಳೆಬಿಚ್ಚೋಲೆ,ಕನ್ನಡಿ ,ಬಳೆಗಳು ,೫ ಬಗೆಯ ಹಣ್ಣುಗಳು ,ರವಿಕೆ ಕಣ ,ತಾಯಿಗೆ ಹಾಗೆ ಅತ್ತಿಗೆ ,ನಾದಿನಿಯರಿಗೆ  ಸೀರೆಯನ್ನು ಹಾಕಿ, ಸುಮಂಗಲಿಯರು ಉಪಯೋಗಿಸುವ ವಸ್ತುಗಳು ,ಭಕ್ಷ್ಯಗಳು  (ಯಥಾ ಶಕ್ತಿ ಏನಾದರು ಕೊಡಬಹುದು ) ಹಾಕಿ ಮೊರದ ಬಾಗಿನ ಸಿದ್ಧ ಪಡಿಸಬೇಕು .ನಂತರ ಮನೆಯನ್ನು ಶುಚಿಗೊಳಿಸಿ  ರಂಗವಲ್ಲಿ ಹಾಕಿ ,ದೇವಿಯನ್ನು ಸ್ಥಾಪನೆ ಮಾಡುವ ಸ್ಥಳವನ್ನು ಶುಭ್ರವಾಗಿ ಅಲಂಕರಿಸಿ ,ಗೌರಿ ಮೂರ್ತಿಯನ್ನು ಶೃಂಗರಿಸಿ ,ತೋರಣದಿಂದ ಮಂಟಪವನ್ನು ಹಾಗೆ ಮನೆಯ ಮುಂಬಾಗಿಲನ್ನು  ಅಲಂಕರಿಸಬೇಕು . ಪತ್ರೆಗಳನ್ನು ,ಹೂವುಗಳನ್ನು ,ಹೂವಿನ ಮಾಲೆಗಳನ್ನು ಕಟ್ಟಿ , ೫ ತೆಂಗಿನಕಾಯಿ  ಪೂಜೆಗಾಗಿ ಅರಿಶಿನ ಕುಂಕುಮ, ಚಂದ್ರ,ಚಂದನ,ಅಡಿಕೆ,ದಶಾಂಗಂ ,೫ ಬಗೆಯ ಹಣ್ಣುಗಳನ್ನು, ದೀಪದ ಕಂಬಕ್ಕೆ ದೀಪದ ಬತ್ತಿಗಳನ್ನು ತುಪ್ಪದಲ್ಲಿ ನೆನಸಿ,ಗೆಜ್ಜೆವಸ್ತ್ರಗಳು ,೧೬ ಎಳೆಯ ಗೆಜ್ಜೆವಸ್ತ್ರ ಹಾಗೆ ೧೬ ಎಳೆ  ದೋರ  ಗ್ರಂಥಿಗಳನ್ನು ತಯಾರಿಸಬೇಕು ಅದಕ್ಕೆ ೧೬ ಗಂಟನ್ನು ಹಾಕಿ ದೋರವನ್ನು ಸಿದ್ಧ ಪಡಿಸಬೇಕು . ಪಂಚಾಮೃತ ಅಭಿಷೇಕ ,ಮಧುಪರ್ಕ ,ಮಂಗಳಾರತಿ ಬತ್ತಿಗಳು . ಒಂದು ತಟ್ಟೆಯಲ್ಲಿ ಉಪಾಯನ ದಾನಕ್ಕಾಗಿ ೨ ತೆಂಗಿನಕಾಯಿಗಳು  ನಾಲ್ಕು ವಿಳ್ಳೆ ದೆಲೆ ,ಅಡಿಕೆಗಳು ,ದಕ್ಷಿಣೆ,  ಸ್ವಲ್ಪ ಅಕ್ಕಿ ಅದನ್ನು  ಮುಚ್ಚಲು ಒಂದು ತಟ್ಟೆ ಅಥವಾ ಬಾಳೆಯೆಲೆ  ಉಪಯೋಗಿಸಬೇಕು  .


   ಕಲಶದ  ವಿಧಾನ :

                                                                                                                                                             ಇನ್ನು ಕೆಲವರು  ಮರಳಗೌರಿಯನ್ನು ,ಕೆಲವರು ಅರಿಶಿನ ಗೌರಿಯನ್ನು ಇಡುವ ಪದ್ಧತಿ ವಾಡಿಕೆಯಲ್ಲಿ ಇರುತ್ತೆ . ಅವರವರ ಸಂಪ್ರದಾಯದಂತೆ  ಜಗನ್ಮಾತೆಯನ್ನು ಸ್ಥಾಪಿಸಿ  ಪೂಜೆ ಮಾಡಬೇಕು . ಹಾಗೆಯೇ ಕಲಶದಲ್ಲಿ ಗಂಗೆಯನ್ನು ಅದಕ್ಕೆ ೫ ವಿಳ್ಳೆದೆಲೆಯನ್ನು ಇಟ್ಟು  ಹಾಗೆ ಯಾವುದಾದರು ಹಣ್ಣನ್ನು ಕಳಸದಲಿ ಇಡಬೇಕು ಕಲಶದ  ಸುತ್ತ ಬಿಳಿ ಸುಣ್ಣ  ಹಚ್ಚಿ

ಅದಕ್ಕೆ ೪ ಕಡೆ  ಅರಿಶಿನ ಕುಂಕುಮ ಹಚ್ಚಬೇಕು . ಒಂದು ತಟ್ಟೆಯಲ್ಲಿ ಹಳದಿ ( ಅರಿಶಿನ ಹಾಕಿ ವಸ್ತ್ರವನ್ನು ಸಿದ್ಧಪಡಿಸಬಹುದು ) ವಸ್ತ್ರವನ್ನು ಹಾಸಿ , ಎರೆಡು  ವಿಳ್ಳೆದೆಲೆಯ   ಜೊತೆ ಎರೆಡು  ಬಟ್ಳಡಿಕೆ ಇಟ್ಟು  ಗೌರಿಯ ಮೂರ್ತಿ,ಅರಿಶಿನಗೌರಿ ಅಥವಾ ಮರಳ ಗೌರಿಯನ್ನು ಅದರ ಮೇಲೆ ಇಡಬೇಕು  ಜೊತೆಯಲ್ಲಿ ಸಿದ್ಧಪಡಿಸಿದ    ಕಲಶವನ್ನು    ಸ್ಥಾಪನೆ ಮಾಡಬೇಕು .

                     ಇನ್ನು ಉಪ್ಪಕ್ಕಿ ಇಡುವ  ಸಂಪ್ರದಾಯವಿದ್ದರೆ   ತೊಗರಿಬೇಳೆ ಮತ್ತೆ ಅಕ್ಕಿಯನ್ನು   ಬಳಸಿ ೩ ಬಾರಿ ಈ ಕೆಳಕಂಡ  ಮಂತ್ರದಿಂದ  ಉಪ್ಪಕ್ಕಿ ಇಡಬೇಕು - " ಅತ್ತೆ ಆಜ್ಞೆ ಇರಲಿ ,ಮಾವನ ಆಜ್ಞೆ ಇರಲಿ ,ಗಂಡನ ಆಜ್ಞೆ ಇರಲಿ ಸ್ವರ್ಗಕ್ಕೆ ಹೋದರು ಸವತಿ ಕಾಟ  ಬೇಡ ( ಇಲ್ಲದಿರಲಿ )".

                      ಮೊರದ  ಬಾಗಿನ ಕೊಡುವಾಗ ಈ ಕೆಳಕಂಡ ಮಂತ್ರವನ್ನು  ಶ್ರದ್ಧಾಪೂರ್ವಕವಾಗಿ ಹೇಳಿ  ಬಾಗಿನ ಕೊಟ್ಟರೆ ಬ್ರಹ್ಮಾಂಡ ದಾನ ಮಾಡಿದ ಪುಣ್ಯ ಲಭಿಸುವುದೆಂದು  ಹೇಳಿಕೆಯಿದೆ .


"ರಾಮಪತ್ನಿ ಮಹಾಭಾಗಿ ಪುಣ್ಯಮೂರ್ತಿ ನಿರಾಮುಖಿ  ಮಯಾದತ್ತಾಣಿ ಸೂರ್ಪಾಣಿ  ಗೃಹಾಣೇಮಾನಿ  ಜಾನಕಿ '.


                     ದೇವರನ್ನು ವಿಸರ್ಜನೆ ಮಾಡುವ ಮುಂಚೆ ದೇವರನ್ನು ಕದಲಿಸಿ ಸೋಬಲಕ್ಕಿ ಇಡಬೇಕು . ಅದಕ್ಕೆ ಬೇಕಾಗುವ ಸಾಮಾಗ್ರಿಗಳು : ತೆಂಗಿನಕಾಯಿ,(ತೆಂಗಿನಕಾಯಿ ಇಲ್ಲದಿದ್ದಲ್ಲಿ ಒಣಕೊಬ್ಬರಿ ಬಟ್ಟಲನ್ನು ಉಪಯೋಗಿಸಿ )ಬೆಲ್ಲದಚ್ಚು ,ಬಳೆ  ಬಿಚ್ಚೋಲೆ , ವಿಳ್ಳೆ ದೆಲೆಗಳು ,ಅಡಿಕೆಗಳು,ದಕ್ಷಿಣೆ,ಸೀರೆ ,ಎರೆಡು ರವಿಕೆ ಕಣಗಳು ,ಹಣ್ಣುಗಳಾದ  ದಾಳಿಂಬೆ ,ಛೇಪೆ ಹಣ್ಣು ,ಸೀತಾ ಫಲ ,ಸಪೋಟ ,ಮೂಸಂಬಿ ,ಕಿತ್ತಳೆ ಫಲ . ನಂತರ ಮಂಗಳಾರತಿ ಮಾಡಿ  ದೇವಿಯ ಜೊತೆ ಗಣೇಶನನ್ನು ವಿಸರ್ಜನೆ ಮಾಡಬೇಕು . ಮೊಸರನ್ನವನ್ನು ಮೂರ್ತಿಯ ಜೊತೆ ವಿಸರ್ಜಿಸಿ ಸ್ವಲ್ಪ ಪ್ರಸಾದವಾಗಿ ಮನೆಯವರೆಲ್ಲಾ  ಸೇವಿಸಬೇಕು .

 ಶ್ರೀ ಸ್ವರ್ಣಗೌರಿ ವ್ರತ ಮತ್ತು ಕಥಾ ಶ್ರವಣ -

*****


ಸ್ವರ್ಣ ಗೌರಿ ವ್ರತ:

ತಿಳಿದಿರಲಿ ಈ ಸಂಗತಿಗಳು.


ಶ್ರಾವಣಮಾಸದ ವೈಭವದ ಲಕ್ಷ್ಮೀಪೂಜೆಯ ನಂತರ ಬರುವ ಭಾದ್ರಪದ ಮಾಸದ ಗೌರೀ ಹಬ್ಬ ವಿಶೇಷತೆಗಳಲ್ಲಿ ಒಂದು.


ಸ್ವರ್ಣಗೌರೀವ್ರತದ ಹಿನ್ನೆಲೆ, ವಿಶೇಷತೆ ಮತ್ತು ಸಿದ್ಧತೆ

ಪ್ರಾಚೀನ ಕಾಲದ ವಿಧಿ, ಸಂಪ್ರದಾಯ, ನಿಯಮಗಳನ್ನು ಗಮನಿಸಿದರೆ ಸ್ತ್ರೀಯರೇ ಪ್ರತ್ಯೇಕವಾಗಿ, ಸ್ವತಂತ್ರವಾಗಿ ಆಚರಿಸಬಹುದಾದ ಯಾವ ಆಚರಣೆಗಳೂ ಕಂಡುಬರುವುದಿಲ್ಲ. ಆಕೆ ಗೃಹಿಣಿಯಾಗಿ ಪತ್ನಿಯ ಸ್ಥಾನದಲ್ಲಿ ಕುಳಿತು ಪತಿಯೊಂದಿಗೆ ಯಜ್ಞ, ಯಾಗ, ಪೂಜೆ, ವ್ರತಗಳಲ್ಲಿ ಸಹಭಾಗಿಯಾಗಬಹುದಷ್ಟೇ


ಸಂಸ್ಕೃತಿ, ಪುರಾಣ, ಇತಿಹಾಸಗಳ ಕಾಲದಲ್ಲಿ ಸಮಷ್ಟಿಹಿತ ಚಿಂತನೆಯ ದೃಷ್ಟಿಯಿಂದ ನಡೆದಿರಬಹುದಾದ ವಿಶಿಷ್ಟ ವೈಚಾರಿಕತೆಯ ಪರಿಣಾಮವಾಗಿ ಗೃಹಿಣಿಯರೇ ಪತಿಯ ಅನುಮತಿ ಪಡೆದು ಸ್ವತಂತ್ರವಾಗಿ ಆಚರಿಸಬಹುದಾದ ವ್ರತಾಚರಣೆ ಪ್ರಾರಂಭವಾದವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಸ್ವರ್ಣಗೌರಿ ವ್ರತ, ಹರಿತಾಲಿಕಾ ವ್ರತ, ಮಂಗಳಗೌರಿ ವ್ರತ ಮುಂತಾದವು ಸ್ತ್ರೀಯರಿಗೇ ಮೀಸಲಾದ ವ್ರತಗಳು.


ವ್ರತಗಳು ಸುಲಭ, ಸರಳ, ಇವುಗಳಿಂದ ಇಷ್ಟ ದೈವವನ್ನು ಒಲಿಸಿಕೊಳ್ಳಬಹುದು. ಸ್ವರ್ಣಗೌರಿ ವ್ರತವೂ ಮಹಿಳೆಯರು ಬಹು ಸಂಭ್ರಮ, ಭಕ್ತಿಯಿಂದ ಮಾಡುವಂತಹದ್ದು. ಭಾದ್ರಪದ ಶುದ್ಧ ಚತುರ್ಥಿತಯುತ ತದಿಗೆಯ ದಿನವೇ ನಡೆಸಬೇಕು. ವ್ರತ ಅಂದರೆ ನಿಯಮ. ಶ್ರದ್ಧೆ, ಭಕ್ತಿ, ದೃಢಸಂಕಲ್ಪ, ದಾನ, ದಕ್ಷಿಣೆ, ಉಪವಾಸ ಅಥವಾ ಮಿತಾಹಾರ ಮುಖ್ಯವಾಗಿರುತ್ತದೆ. ಗೃಹಿಣಿಯರು ಸ್ವತಃ ಸಂಕಲ್ಪ ಮಾಡಿ ಅಕ್ಷಯ ಸೌಭಾಗ್ಯ ಧರ್ಮಾರ್ಥಕಾಮ ಚತುರ್ವಿಧ ಪುರುಷಾರ್ಥ ಸಿದ್ಧಿಗಾಗಿ, ಪುತ್ರ ಪೌತ್ರಾದಿ ಧನ ಧಾನ್ಯ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

 

ಯಾರು ಈ ಸ್ವರ್ಣ ಗೌರಿ?

ಸುವರ್ಣ ಬಣ್ಣದ ಗೌರಿ ಶಿವನ ಅರ್ಧಾಂಗಿ. ಆಕೆ ಜಗದ್ವಂದ್ಯಳು. ದಕ್ಷ ಮಹಾರಾಜನ ಮಗಳಾಗಿ ಹುಟ್ಟಿ ಶಿವನ ಮಡದಿಯಾದ ದಾಕ್ಷಾಯಿಣಿ, ತವರಿನಲ್ಲಿ ತಂದೆ ಮಾಡುವ ಯಾಗಕ್ಕೆ ಬಂದು ಅಪಮಾನಿತಳಾಗುತ್ತಾಳೆ. ಯಜ್ಞಕುಂಡದಲ್ಲೇ ಪ್ರಾಣತ್ಯಾಗ ಮಾಡಿದ ಆಕೆ ಹುಟ್ಟಿದ್ದು ಮಹಾ ಶಿವಭಕ್ತನಾದ ಹಿಮವಂತ ಮತ್ತು ಆತನ ಪುಣ್ಯ ವಲ್ಲಭೆ ಮೇನಾದೇವಿಯರಿಗೆ ಮಗಳಾಗಿ! ಗಿರಿಜೆ ಶಿವಲಿಂಗ ದರ್ಶನ ಮಾಡಿಯೇ ಕಣ್ತೆರೆದವಳು. ಮುಂದಿನ ಅವಳ ಕತೆ ರೋಚಕವಾಗಿದೆ.

 

ಗೌರಿ-ಶಂಕರ ವಿವಾಹ

ಶಿವಭಕ್ತೆಯಾಗಿಯೇ ಬೆಳೆದ ಗೌರಿ. ನಾರದರ ಸಲಹೆಯಂತೆ ಹೇಮಕೂಟದಲ್ಲಿ ತಪೋಯೋಗದಲ್ಲಿರುವ ಶಿವನ ಬಳಿ, ತನ್ನ ಸಖಿಯರಾದ ಜಯ-ವಿಜಯರ ಜೊತೆ ಬಂದು ಶಿವನ ಅರ್ಚನೆಗೆ ತೊಡಗುತ್ತಾಳೆ. ತಾರಕಸುರನ ವಧೆಗಾಗಿ ಕುಮಾರ ಸಂಭವವಾಗಬೇಕು. ಶಿವ ಗಿರಿಜೆಗೆ ಒಲಿಯಬೇಕು. ಗೌರಿಯ ತಪೋನಿಷ್ಠೆ ಅಚಲವಾದುದು. ವಟುವೇಷ ಧರಿಸಿ ಅವಳ ಪರೀಕ್ಷೆಗೆ ಬಂದ ಶಿವನದೇ ಪರೀಕ್ಷೆಯಾಯಿತು. ಗಿರಿಜೆಗಾಗಿ ಕಾಮನನ್ನು ಬದುಕಿಸಿದ. ಮೂರು ಲೋಕ ಮೆಚ್ಚುವಂತೆ, ಲೋಕಕಲ್ಯಾಣವಾಗುವಂತೆ ಗೌರೀ ಶಂಕರರ ವಿವಾಹವಾಯಿತು. ಶಿವನು ಸ್ವಯಂಭೂ, ಶಕ್ತಿ ಹಲವು ರೂಪ, ಜನ್ಮ ತಾಳಿ ಪರಶಿವನನ್ನೇ ಸೇರುವುದು ಅರ್ಥಪೂರ್ಣ.                           

ಎಲ್ಲಾ ಮಹಿಳೆಯರಿಗೂ ಆದರ್ಶ ಈ ಗೌರಿ

ಆನೆಮೊಗದ ತನ್ನ ಮಗ ಲೋಕವಂದಿತನಾಗಬೇಕೆಂದು ವರ ಪಡೆದವಳು ಗೌರಿ. ವಿರೂಪಾಕ್ಷನನ್ನು ತನ್ನ ಮನದಿಚ್ಛೆಯಂತೆ ಕಠಿಣ ತಪಸ್ಸಿನಿಂದ ಪತಿಯಾಗಿ ಪಡೆದು, ತಾರಕಾಸುರನನ್ನು ಸಂಹರಿಸುವ ಸ್ಕಂದನನ್ನು ಪುತ್ರನಾಗಿ ಬೆಳೆಸಿ, ತನ್ನ ಮೈ ಮಣ್ಣಿನಿಂದಲೇ ಮುದ್ದಿನ ಮಗನನ್ನು ಸೃಷ್ಟಿಸಿ, ಅವನು ಪತಿಯಿಂದ ಹತನಾದಾಗ ಮತ್ತೆ ಪ್ರಾಣಶಕ್ತಿ ನೀಡಿ, ಮಗನು ಬದುಕುವಂತೆ ಮಾಡಿಸಿ, ವಿರೂಪನಾದ ಮಗನು ಮಹಾಮಹಿಮನಾಗುವಂತೆ ಮಾಡಿದ ಗೌರಿ, ಸುವರ್ಣದ ಗೌರಿ, ಸ್ವರ್ಣಗೌರಿ ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯಳು. ಪುರುಷರಿಗೂ ಮಾನ್ಯಳು. ಅವಳ ಭಕ್ತರನ್ನು ಶಿವನೇ ಕಾಯುತ್ತಾನೆ.

 

ಗೌರೀ ವ್ರತ ಯಾಕೆ?

ಶಿವನ ಅರ್ಧಾಂಗಿ ಪಾರ್ವತಿ ಹರತಾಳಿಕಾ ಉಪವಾಸ ಮಾಡುತ್ತಾ 'ಅಪರ್ಣಾ' ಎಂದು ಕರೆಸಿಕೊಂಡು ಯಶಸ್ವಿಯಾಗಿ ಶಿವನನ್ನು ಪಡೆದಳು ಎನ್ನುವ ಕಥೆಯಿದೆ. ಅಂಥ ಹಠಸಾಧನೆಯ ಗೌರಿಯನ್ನು ಪೂಜಿಸಿದರೆ ತಾವೂ ಬದುಕಿನ ನೆಮ್ಮದಿಯನ್ನು ಪಡೆಯಬಹುದು ಎಂಬ ಬಯಕೆಯಿಂದ ಮಹಿಳೆಯರು ವ್ರತಾಚರಣೆ ಮಾಡುತ್ತಾರೆ.

 

ಷೋಡಶೋಪಚಾರ

ಷೋಡಶೋಪಚಾರಗಳು ಅಂದರೆ ಹದಿನಾರು ಬಗೆಯ ಉಪಚಾರಗಳು. ಅಭೀಷೇಕ, ಸ್ನಾನ, ಗಂಧ, ಅರಿಶಿನ ಕುಂಕುಮ, ವಸ್ತ್ರ, ಒಡವೆ, ಮಾಂಗಲ್ಯ, ಕಜ್ಜಲ, ಕಂಕಣ ಹೀಗೆ ಮಂಟಪದಲ್ಲಿ ಆಸೀನಳಾದ ಗೌರಿಗೆ ಉಪಚಾರಗಳು ನಡೆದು ಕೊನೆಗೆ ಸಿಹಿಯೊಂದಿಗೆ ಆಕೆಯನ್ನು ಸಂತೃಪ್ತಿಗೊಳಿಸುವುದು.

 

ಗೌರಿ ಅಲಂಕಾರ

ಈ ಎಲ್ಲಾ ಉಪಚಾರಗಳಲ್ಲೇ ಅತ್ಯಂತ ಖುಷಿ ಕೊಡುವ ಉಪಚಾರವೆಂದರೆ ಗೌರಿಯ ಅಲಂಕಾರ. ಅಲಂಕಾರ, ಸ್ತ್ರೀಯರಿಗೆ ಪರಮಾಪ್ತ, ಸೇವಂತಿಕಾ, ಬಕುಳ, ಚಂಪಕ, ಪುನ್ನಾಗ, ಜಾಜಿ, ಕರವೀರ, ಮಲ್ಲಿಕಾ ಎನ್ನುವ ಹೂಗಳೊಂದಿಗೆ ಬಣ್ಣ ಬಣ್ಣದ ಹಲವು ಹೂವುಗಳು ಈ ಗೌರಿಹಬ್ಬಕ್ಕೇ ವಿಶೇಷವಾಗಿ ಪ್ರಕೃತಿಯಲ್ಲಿ ದೊರೆತು ಗೌರಿಯ ಮುಡಿಯೇರುವುದನ್ನು ನೋಡುವಾಗ ಪ್ರಾಯಶಃ ಈಗ ಪೂಜೆ ಪರಿಪೂರ್ಣವಾಯಿತು ಎಂದೆನ್ನಿಸುವುದು ಸತ್ಯ.               


ಬಾಗಿನ ಕೊಡುವುದು                                                             ಬಾಗಿನ ಎಂದರೆ ದಾನ, ಹಾರೈಕೆ

ಕೊಡುಕೊಳ್ಳುವಿಕೆಯ ಬಾಗಿನವೂ ಗೌರಿಹಬ್ಬದ ವೈಶಿಷ್ಟ್ಯವೇ. ಸಮೃದ್ಧಿ, ನೆಮ್ಮದಿಯನ್ನು ಪರಸ್ಪರ ಹಾರೈಸುತ್ತಾ ನೀಡುವ ಬಾಗಿನ ದಾನವೂ ಹೌದು, ಹಾರೈಕೆಯೂ ಹೌದು.

 

ಹಿಂದಿನ ದಿನವೇ ವ್ರತ ಆರಂಭ

ಯಾವುದೇ ವ್ರತವಾಗಲಿ ಹಬ್ಬವಾಗಲಿ ಹಿಂದಿನ ದಿನವೇ ನಿಜವಾಗಿ ಆರಂಭವಾಗುತ್ತದೆ. ಸಿದ್ಧತೆಯನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ವ್ರತದ ಹಿಂದಿನ ದಿನ ರಾತ್ರಿಯೇ ನಾಳೆ ವ್ರತವನ್ನು ಮಾಡುವೆನೆಂದು ಸಂಕಲ್ಪಿಸಿ ಉಪವಾಸ ಅಥವಾ ಫಲಾಹಾರ ಇಲ್ಲವೇ ಅಲ್ಪಾಹಾರ ಮಾಡಿ ವ್ರತದ ಪ್ರಧಾನ ದೇವರನ್ನು ಧ್ಯಾನಿಸುತ್ತಾ ನಿದ್ರಿಸಬೇಕು. ಗೌರಿಹಬ್ಬ ಅಥವಾ ಸ್ವರ್ಣಗೌರಿ ವ್ರತವೂ ಈ ನಿಯಮಕ್ಕೆ ಹೊರತಾಗಿಲ್ಲ.                                                                                              

ನಸುಕಿನಲ್ಲೇ ವ್ರತಕ್ಕೆ ತಯಾರಿ

ವ್ರತದ ದಿನ ನಸುಕಿನಲ್ಲೆದ್ದು, ಬಾಗಿಲನ್ನು ರಂಗವಲ್ಲಿಯಿಂದ ಸಿಂಗರಿಸಿ, ಮೈಗೆ ಎಣ್ಣೆ ಹಚ್ಚಿಕೊಂಡು ಮುಡಿಯಿಂದ ಅಡಿಯವರೆಗೂ ಮಿಂದು ಮಡಿಯ ಬಟ್ಟೆ ಉಟ್ಟುಕೊಂಡು ಹಣೆಗೆ ವಿಭೂತಿ ಕುಂಕುಮ ಮುಂತಾದವುಗಳನ್ನಿಟ್ಟುಕೊಂಡು ಪೂಜಿಸಲು ಸಿದ್ಧರಾಗಬೇಕು. ನದಿಯು ಸಮೀಪದಲ್ಲಿ ಇಲ್ಲದಿದ್ದರೆ ಮನೆಯಲ್ಲಿಯೇ ತಣ್ಣಿರಿನಿಂದ ಸ್ನಾನ ಮಾಡಬಹುದು. ಆರೋಗ್ಯವನ್ನು ಗಮನಿಸಿ ಸ್ನಾನಕ್ಕೆ ಬೆಚ್ಚಗಿನ ನೀರನ್ನೂ ಬಳಸಬಹುದು.

 

ಗೌರಿಪೂಜೆಗೂ ಮುನ್ನ...

ಪರಿಶುದ್ಧವಾದ ಪೂಜೆಯ ಸ್ಥಾನದಲ್ಲಿ ಫಲ-ಪುಷ್ಪಗಳಿಂದ ಅಲಂಕೃತವಾದ ಮಂಟಪದಲ್ಲಿ ಕಲಶವನ್ನು ಅಥವಾ ಹೊಂಬಣ್ಣದ ಶ್ರೀಗೌರಿಯ ಮೂರ್ತಿಯನ್ನು ಇಡಬೇಕು. ಬಾಳೆ ಎಲೆಯ ಮೇಲೆ ಅಕ್ಕಿಯ ರಾಶಿಯನ್ನು ಹರಡಿ ಅದರ ಮೇಲೆ ಲಭ್ಯವಿರುವ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯ ಪಾತ್ರೆಯನ್ನು ಇಟ್ಟು ನೀರನ್ನು ತುಂಬಬೇಕು. ಅದರ ಮೇಲೆ ಕನಿಷ್ಠ ಐದು ಎಲೆಗಳಿರುವ ಮಾವಿನ ಚಿಗುರನ್ನು ಇಟ್ಟು, ಮೇಲಿನಿಂದ ತೆಂಗಿನಕಾಯಿ ವಸ್ತ್ರ ಬಳೆ ಮುಂತಾದವುಗಳನ್ನಿಟ್ಟು ಅಲಂಕರಿಸಬೇಕು.                                                                                                    

ಗೌರಿ ಪೂಜೆ ಹೇಗೆ ?

ಪೂಜೆಯನ್ನು ಎರಡು ಬಗೆಯಲ್ಲಿ ಮಾಡಬಹುದು. ಅನುಕೂಲವಿದ್ದರೆ ಮಂತ್ರಗಳನ್ನು ಉಚ್ಚರಿಸುತ್ತಾ ಪೂಜಿಸಬಹುದು. ಶ್ರೀ ಗೌರ್ಯೈ ನಮಃ ಎಂದೋ, ಹೇಳುತ್ತಾ ಆವಾಹನೆ, ಆಸನ, ಪಾದ್ಯ, ಅರ್ಘ್ಯ, ಅಭಿಷೇಕ, ಗಂಧ, ಪುಷ್ಪ, ಅಕ್ಷತೆ ಧೂಪ ದೀಪ ನೈವೇದ್ಯ ಆರತಿ ಪ್ರದಕ್ಷಿಣೆ ನಮಸ್ಕಾರ ಪ್ರಾರ್ಥನೆಗಳನ್ನು ಮಾಡಬಹುದು.


ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ

ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ

ಎಂಬ ಸ್ತೋತ್ರವನ್ನು ಆವರ್ತಿಸಬಹುದು. ಅದಲ್ಲದಿದರೆ ಭಕ್ತಿಯಿಂದ, ಗೌರಿಯನ್ನು ಸ್ತುತಿಸುವ ಹಾಡನ್ನು ಹಾಡುತ್ತಾ ಪೂಜಿಸಬಹುದು.                                                                                                                

ವ್ರತಾಚರಣೆ ಹೇಗೆ ?

ಭಾದ್ರಪದಮಾಸದ ಶುಕ್ಲಪಕ್ಷದ ತದಿಗೆಯಂದು ವ್ರತ ಆಚರಿಸಬೇಕು. ಅಂದು ಸೂರ್ಯೋದಯ ಸಮಯದಲ್ಲಿ ತದಿಗೆ ತಿಥಿ ಇರಬೇಕು. ಗಣೇಶನ ಪೂಜೆಗೆ ನಿಯತವಾಗಿರುವ ಚತುರ್ಥಿ ತಿಥಿಯ ಯೋಗವನ್ನು ಗೌರಿದೇವಿಯು ತುಂಬಾ ಪ್ರೀತಿಸುತ್ತಾಳೆ. ಹಾಗಾಗಿ ತೃತೀಯಯೊಡನೆ ಚತುರ್ಥಿಯೋಗವು ಕೂಡಿಬಂದರೆ ಅಂದೇ ಗೌರಿಹಬ್ಬವನ್ನು ಆಚರಿಸಬೇಕು. ಗೌರಿ ದೇವಿಯನ್ನು ಹೃದಯದಲ್ಲಿ ಧ್ಯಾನಮಾಡಿ ಆನಂತರ ಹೊರಗೆ ಪೂಜಿಸಬೇಕು.            

                                                                         

ಗೌರಿ ಪ್ರತಿಮೆ

ಗೌರಿದೇವಿಯ ಸುವರ್ಣಪ್ರತಿಮೆ ಅಥವಾ ಕಲಶ ಅಥವಾ ಹರಿದ್ರಾ (ಅರಿಶಿನದ) ಅಥವಾ ಶುದ್ಧ ನದಿಯಿಂದ, ಸರೋವರದಿಂದ ಸಂಗ್ರಹಿಸಿದ ಮರಳು ಹಾಗೂ ಮಣ್ಣು ಮುಂತಾದವುಗಳಲ್ಲಿ ದೇವಿಯನ್ನು ಅವಾಹಿಸಿ ಪೂಜಿಸಬಹುದಾಗಿದೆ.                                                                             

ಘಂಟಾನಾದ ಸಹಿತ ಪೂಜೆ

ಘಂಟಾನಾದ ಸಹಿತ ಪೂಜೆಯ ಪ್ರಾರಂಭ, ಆಚಮನ, ಸಂಕಲ್ಪ, ಕಳಶಪೂಜೆ, ಮಹಾಗಣಪತಿ ಪೂಜೆ, ಸ್ವರ್ಣಗೌರಿ ದೇವತಾ ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಧ್ಯಾನಿಸಬೇಕು. ಪುಷ್ಪಾಕ್ಷತೆಗಳಿಂದ ಆಕೆಯನ್ನು ಆವಾಹಿಸಿ ರತ್ನ ಸಿಂಹಾಸನವನ್ನು ಸಮರ್ಪಿಸಬೇಕು. ಹೊಸ ದಾರವನ್ನು ಪೂಜೆ ಮತ್ತು ಧಾರಣೆಗಾಗಿ ಇರಿಸಿಕೊಳ್ಳಬೇಕು. ಪಾದ್ಯ, ಅರ್ಘ್ಯ, ಅಚಮನ, ಮಧುಪರ್ಕ, ಪಂಚಾಮೃತಸ್ನಾನ, ಶುದ್ದೋದಕಸ್ನಾನ, ವಸ್ತ್ರ, ಆಭರಣ, ಯಜ್ಞೋಪವೀತ, ಗಂಧ, ಅಕ್ಷತೆ, ಅರಿಶಿನ ಕುಂಕುಮ ಇತ್ಯಾದಿ ಸೌಭಾಗ್ಯ ದ್ರವ್ಯಗಳು ಮತ್ತು ಪುಷ್ಪ ಇವುಗಳನ್ನು ಜಗನ್ಮಾತೆಗೆ ಸಮರ್ಪಿಸಬೇಕು.


ಶೋಡಶ ನಾಮ

ಹದಿನಾರು ನಾಮಗಳಿಂದ ಪೂಜೆ -

ದೇವಿಗೆ ಅಂಗಪೂಜೆ, ಪುಷ್ಪಪೂಜೆ, ಪತ್ರಪೂಜೆ, ನಾಮಪೂಜೆಗಳನ್ನು ಸಲ್ಲಿಸಿ, ದಾರದ 16 ಗ್ರಂಥಿಗಳಿಗೂ ಕ್ರಮವಾಗಿ ಸ್ವರ್ಣಗೌರಿ, ಮಹಾಗೌರಿ, ಕಾತ್ಯಾಯಿನಿ, ಕೌಮಾರಿ, ಭದ್ರಾ, ವಿಷ್ಣುಸೋದರಿ, ಮಂಗಳದೇವತಾ, ರಾಕೇಂದುವದನಾ, ಚಂದ್ರಶೇಖರಪ್ರಿಯಾ, ವಿಶ್ವೇಶ್ವರ ಪತ್ನಿ, ದಾಕ್ಷಾಯಣಿ, ಕೃಷ್ಣವೇಣಿ, ಭವಾನಿ, ಲೋಲೇಕ್ಷಣಾ, ಮೇನಕಾತ್ಮಜಾ ಎಂಬ ಹದಿನಾರು ನಾಮಗಳಿಂದ ಪೂಜೆಯನ್ನು ಸಲ್ಲಿಸಬೇಕು. ಅಷ್ಟೋತ್ತರ ಶತದಿವ್ಯನಾಮಗಳಿಂದ ಪೂಜೆಯನ್ನು ಸಲ್ಲಿಸಿ ಧೂಪ, ದೀಪ, ನೈವೇದ್ಯ, ತಾಂಬೂಲ, ಫಲ, ದಕ್ಷಿಣೆ, ಅರ್ಘ್ಯ, ನೀರಾಜನ, ಪುಷ್ಪಾಂಜಲಿ, ಪ್ರದಕ್ಷಿಣೆ ನಮಸ್ಕಾರಗಳನ್ನು ಸಮರ್ಪಿಸಬೇಕು.

 

ನೈವೇದ್ಯ ಹೇಗಿರಬೇಕು ?

ದೇವಿಯ ನೈವೇದ್ಯಕ್ಕೆ ಸಮರ್ಪಿಸಬೇಕಾದ ವಿಶೇಷದ್ರವ್ಯ ಹರಿದ್ರಾನ್ನ, ಮುದ್ಗಾನ್ನ. ಇಷ್ಟಾರ್ಥವನ್ನು ಸಲ್ಲಿಸಬೇಕೆಂದು ದೇವಿಯನ್ನು ಪ್ರಾರ್ಥಿಸಿ ಆಕೆಯ ಅನುಮತಿಯಿಂದ ಮೇಲೆ ಹೇಳಿದ ಪೂಜಿತವಾದ ಹದಿನಾರು ಗಂಟುಗಳುಳ್ಳ ದಾರವನ್ನು ಧರಿಸಬೇಕು. ವ್ರತಸಂಪೂರ್ತಿಗಾಗಿ ಶ್ರೇಷ್ಠದ್ವಿಜರಿಗೂ, ಸುವಾಸಿನಿಯರಿಗೂ ಪಕ್ವಾನ್ನವೇ ಮುಂತಾದ ಉಪಾಯನಗಳನ್ನು ದಾನ ಮಾಡಬೇಕು. ದೇವಿಗೆ ಛತ್ರ ಚಾಮರ, ನೃತ್ಯ, ವಾದ್ಯ, ಆಂದೋಳಿಕಾ ಮತ್ತು ಇತರ ಉಪಚಾರಗಳನ್ನು ಸಮರ್ಪಿಸಿ ಆಕೆಯ ಪ್ರೀತಿ ಪ್ರಸನ್ನತೆಗೆ ಪ್ರಾರ್ಥಿಸಬೇಕು.

                                                                      

ಗೌರಿ ಹಬ್ಬವೆಂದರೆ ಸಂಭ್ರಮವೋ ಸಂಭ್ರಮ


ಹೆಣ್ಣುಮಕ್ಕಳಿಗೆ ಹಬ್ಬಗಳೆಂದರೆ ಖುಷಿಯೂ ಒತ್ತಡವೂ ಏಕಕಾಲಕ್ಕೆ. ಶ್ರಾವಣದಲ್ಲಂತೂ ಹಬ್ಬಗಳದ್ದೇ ಕಾರುಬಾರು. ಅಷ್ಟಿದ್ದೂ ಭಾದ್ರಪದದ ಗೌರಿಹಬ್ಬ ಮಾತ್ರ ಒಂದು ಮುಷ್ಠಿ ಹೆಚ್ಚು ಆಪ್ತ. ಏಕೆಂದರೆ ಗೌರಿಯ ಸಂಸಾರದಲ್ಲಿ ನಮ್ಮ ಸಂಸಾರದ ನೆರಳೂ ಕಾಣುತ್ತದೆ ಎಂದೋ, ಗೌರಿಯಂತೇ ಕುಟುಂಬದ ಜವಾಬ್ದಾರಿ ತನ್ನ ಹೆಗಲ ಮೇಲಿರುತ್ತದೆ ಎಂದೋ, ಒಟ್ಟಿನಲ್ಲಿ ಗೌರಿಯಂಥ doದ್ದೇ ಬದುಕು ನಮ್ಮದೂ ಎನ್ನುವ ಕಾರಣಕ್ಕೆ ಈ ಹಬ್ಬವೆಂದರೆ ಹೆಂಗೆಳೆಯರಿಗೆ ಹೆಚ್ಚು ಪ್ರೀತಿ.



******


ಮುತೈದೆ ದೇವತೆಯರು ೧೬ ಜನರು


ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..


ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..


ಸೀರೆ ಸೆರಗಿನಲ್ಲಿಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ.


ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಹೇಳುತ್ತಾರೆ..


ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..


ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,

ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ.


ಈ ೧೬ ದೇವತೆಗಳು ನಿತ್ಯಸುಮಂಗಲಿಯರು


ಈ ೧೬ ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು.


ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ.


೧೬ ಅರಿಸಿನ ದಾರ,


೧೬ ಗಂಟುಗಳು,


೧೬ ಬಾಗಿನ,


೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ.



ಸ್ವರ್ಣಗೌರೀ ವ್ರತದಲ್ಲಿ ಹದಿನಾರು ಎಳೆ ಹಾಗೂ ಗ್ರಂಥಿ(ಗಂಟು)ಗಳಿಂದ ಕೂಡಿದ ದಾರವನ್ನು ಸ್ತ್ರೀಯರು ಧರಿಸುವ ರೂಢಿ ಇದೆ.

ಇದಕ್ಕೆ ಕಾರಣವೇನು? ಏನು ಈ ಹದಿನಾರು ಸಂಖ್ಯೆಯ ವಿಶೇಷ?


ಸಮಾಧಾನ:-


ಇಡೀ ಸೃಷ್ಟಿಯು ಪುರುಷ ಹಾಗೂ ಪ್ರಕೃತಿ ಸ್ವರೂಪವಾದುದು.


ಶ್ರೀಸ್ವರ್ಣಗೌರೀಯು ಪ್ರಕೃತಿ ಮಾತೆ. ಇವಳ ಅನುಗ್ರಹದಿಂದಲೇ ಸಮಸ್ತ ಸೃಷ್ಟಿಯೂ ವಿಸ್ತಾರವಾಗಿ ಬೆಳೆಯುವುದು.


ಹೀಗೆ ಸೃಷ್ಟಿ ವಿಸ್ತಾರವಾಗುವ ಕೊನೆ ಕೊನೆಯ ಹಂತಗಳಾದ ಸೂಕ್ಷ್ಮರೂಪವಾದ ಪಂಚತನ್ಮಾತ್ರೆಗಳು (ಶಬ್ದ, ಸ್ಪರ್ಶ, ರೂಪ, ರಸ, ಗಂಧ) ಇವುಗಳು ವ್ಯಕ್ತವಾಗುವ ಪೃಥ್ವಿ, ಅಪ್ಪು(ನೀರು), ತೇಜಸ್ಸು(ಅಗ್ನಿ), ವಾಯು, ಆಕಾಶಗಳೆಂಬ ಪಂಚಭೂತಗಳು ಹಾಗೂ ಪಂಚಕರ್ಮೇಂದ್ರಿಯಗಳು ಇವಿಷ್ಟೂ ಸೇರಿ 15 ತತ್ತ್ವಗಳು ಹಾಗೂ ಮನಸ್ಸು ಸೇರಿ 16 ತತ್ತ್ವಗಳಿಗೂ ಶ್ರೀದೇವೀಯೇ ಅಧಿಷ್ಟಾತ್ರಿ.


ದಾರದಲ್ಲಿರುವ 16 ಎಳೆಗಳು ನಮ್ಮನ್ನು ಪರಮಾತ್ಮ ತತ್ತ್ವದತ್ತ ಕರೆದೊಯ್ಯುವ ನಾಡೀಮಾರ್ಗಗಳ ಪ್ರತೀಕ. ಗ್ರಂಥಿ(ಗಂಟು)ಗಳು ಮೇಲೆ ಹೇಳಿರುವ ತತ್ತ್ವಗಳ ಪ್ರತೀಕವಾದುವು.


ಪ್ರಕೃತಿ ಮಾತೆಯಾದ ಸ್ವರ್ಣಗೌರೀಯು ಮೂಲದಲ್ಲಿ ಸ್ವರ್ಣ(ಬಂಗಾರ)ವರ್ಣದಲ್ಲಿ ಬೆಳಗುವವಳಾದ್ದರಿಂದ ಅವಳ ಅನುಗ್ರಹವನ್ನು ಬಯಸಿ ಧರಿಸುವ 16 ಎಳೆಗಳುಳ್ಳ ದಾರಕ್ಕೆ ಅರಿಷಿಣವನ್ನು ಹಚ್ಚಿ ಧರಿಸುವ ರೂಢಿಯಿದೆ.

                                                                                                                                                 ಜಾತಕ ಕುಂಡಲಿ ವಿಮರ್ಶೆ , ಮದುವೆ ಹೊಂದಾಣಿಕೆ ವಿವಾಹ ದಲ್ಲಿ ವಿಳಂಬ, ಸಂತಾನ ವಿಚಾರ ವೃತ್ತಿ ವಿಚಾರ ಹಾಗೂ

ಮದುವೆ ನಾಮಕರಣ ಗೃಹಪ್ರವೇಶ ಮುಂತಾದ ಶುಭ ಕಾರ್ಯಕ್ರಮಗಳಿಗೆ ಸಂಪರ್ಕಿಸಿ 

ಅಖಿಲೇಶ್ ಆಗಮವಾದಿ

8095959631

Comments